ಕಾಡು..ಹಾಡು...ಇತ್ಯಾದಿ..

Sunday, November 4, 2007

ದೀಪದ ಹಬ್ಬಕ್ಕೆ ಅಕ್ಷರದ ಹಣತೆ



ದೀಪದ ಹಬ್ಬಕ್ಕೆ ಅಕ್ಷರದ ಹಣತೆ
‘ನಾತಲೀಲೆ’ಯ ಮೂಲಕ ಗಮನ ಸೆಳೆದ ಎಸ್. ಸುರೇಂದ್ರನಾಥ್ ಅವರ ಕಾದಂಬರಿ ‘ಎನ್ನ ಭವದ ಕೇಡು’ ಬಿಡುಗಡೆ ಆಗಿದೆ.
ಕನ್ನಡ ಸಾಹಿತ್ಯದಲ್ಲಿ ಅಪರೂಪವಾದ ಫ್ಯಾಂಟಸಿ, ಮ್ಯಾಜಿಕ್ ರಿಯಾಲಿಸಂ ತಂತ್ರದ ೨೬೧ ಪುಟದ ಈ ಕಾದಂಬರಿ ಓ-ತ್ತಾ ಹೋದಂತೆ ಅದ್ಭುತ ಅನುಭವ ನೀಡತ್ತೆ.
ಈ ದೀಪಾವಳಿ ಸಂಭ್ರಮಕ್ಕೆ ಭವದ ಕೇಡಿನ ಕೆಲ ಸಾಲುಗಳ ಹಣತೆ...
...ನಮ್ಮ ಅಜ್ಜಿ ನಮ್ಮಪ್ಪನಂಗೆ ದೊಡ್ಡ ಡಾಕ್ಟ್ರು, ಅವರು ಒಂದು ಮಾತು ಹೇಳೋರು. ಪ್ರತಿಯೊಬ್ರೂ ಹುಟ್ಟೋವಾಗ ಎದೇಲಿ
ಒಂದು ನಂದಾದೀಪ ಇಟ್ಕೊಂಡೇ ಹುಟ್ತಾರಂತೆ. ಈಗ ನಿನ್ನ ಎದೇಲೂ ಅಂಥಾ ಒಂದು ನಂದಾದೀಪ ಇದ್ದೇ ಇರುತ್ತೆ. ಆ
ನಂದಾದೀಪನ್ನ ಹಚ್ಚೋಕೆ ಎಣ್ಣೆ ಬೇಕು. ಬೆಳಗೋಕೆ ಬೆಂಕಿ ಬೇಕು. ನಿನ್ನ ಎದೇಲಿರೋ ನಂದಾದೀಪನ್ನ ಬೆಳಗೋಕೆ
ನಿನ್ಕೈಲಿ ಆಗಲ್ಲ. ನಿನ್ನ ಎದೇಲಿರೋ ದೀಪಕ್ಕೆ ಎಣ್ಣೆ ತುಂಬೋಕೆ. ದೀಪಾನ್ನ ಬೆಳಗೋಕೆ ಇನ್ಯಾರಾದ್ರೂ ಬೇಕು. ನಿನ್ನ ಮನೆ,
ನಿನ್ನ ಅಪ್ಪ- ಅಮ್ಮ, ನಿನ್ನ ಜೊತೆ ಹುಟ್ದೋರು ನಿನ್ನ ದೀಪಕ್ಕೆ ಎಣ್ಣೆ ತುಂಬ್ತಾ ಹೋಗ್ತಾರೆ. ಅದ್ರೆ ಇವ್ರಿಗೂ ನಿನ್ನ ಎದೇಲಿರೋ
ದೀಪ ಬೆಳಗೋಕೆ ಆಗಲ್ಲ. ಆಂದ್ರೆ ನಿನ್ನ ಎದೇಲಿರೋ ದೀಪಾನ್ನ
ಬೆಳಗೋಕೆ ನೀನು ಪ್ರೀತಿ ಮಾಡಿದ ಯಾರಾದ್ರೂ ಒಬ್ರು ಬರಬೇಕು. ಅವರ ಪ್ರೀತಿಯಿಂದ ನಿನ್ನ ದೀಪ ಹತ್ತಬೇಕು.
ಈ ಪ್ರೀತಿ ಯಾವುದ್ರಿಂದಾನಾದ್ರೂ ಬರಬಹುದು. ಒಂದು ಹಾಡು, ಒಂದು ಕತೆ, ಒಂದಿಷ್ಟು ಮಾತು, ಇಲ್ಲಾಂದ್ರೆ ನಿಂಗೆ ಬೇಕಾದ
ಅಡುಗೆ, ನಿಂಗಿಷ್ಟ ಆಗೋ ಹಾಗೆ ನಗಬಹುದು, ನಿನ್ನ ಅಪ್ಕೆಬಹುದು, ನಿಂಗೆ ಒಂದು ಮುತ್ತು ಕೊಡಬಹುದು, ಏನಾದ್ರೂ
ಆಗಬಹುದು. ಅವರ ಪ್ರೀತಿಯಿಂದ ನಿನ್ನ ದೀಪ ಬೆಳಗಬೇಕು. ಆ ದೀಪ ಹತ್ತಿದ ಕೂಡಲೇ ನಮ್ಮ ಮೈ ಬೆಚ್ಚಗಾಗತ್ತೆ.
ನಮ್ಮ ಮೈಯಲ್ಲಿ ಬಿಸಿಯೇರತ್ತೆ. ವಿಪರೀತ ಸಂತೋಷ ಆಗತ್ತೆ. ಅಳಬೇಕೂ ಅನ್ಸತ್ತೆ. ನಮ್ಮ ಮುಖಕ್ಕೆ ಬೆಳಕು ಹಿಡಿದ ಹಾಗಾಗತ್ತೆ.
ಮುಖಕ್ಕೆ ರಂಗು ಬರತ್ತೆ. ನೋಡು ಜಗತ್ತು ಬದಲಾದ ಹಾಗೆ ಕಾಣತ್ತೆ. ಜಗತ್ತಿಗೆ ಹೊಸ ಬಣ್ಣ ಬಂದ ಹಾಗಾಗತ್ತೆ.
ಈ ದೀಪ ಮುಂದ್ಯಾವತ್ತೂ ಆರದ ಹಾಗೆ ನೋಡಿಕೊಳ್ಳೋದೇ ನಮ್ಮ ಜೀವನ. ನಿನ್ನ ನಂದಾದೀಪ ಬೆಳಗೋ
ಪ್ರೀತಿ ಎಲ್ಲಿದೆ, ಅದು ಯಾರ ಹತ್ರ ಇದೆ ಅಂತ ಹುಡುಕೋದು ನಿನ್ನ ಜವಾಬ್ದಾರಿ. ಈ ದೀಪದಿಂದ ನಿನ್ನ ಆತ್ಮಕ್ಕೆ
ಸಂತೋಷ ಸಿಗತ್ತೆ. ನಿನ್ನ ಸಂತೋಷಕ್ಕೆ ಈ ನಂದಾದೀಪ ಬೆಳಗಲೇಬೇಕು. ಒಂದ್ವೇಳೆ ಈ ದೀಪ ಹಚ್ಚೋರು
ಯಾರೂ ಸಿಗಲಿಲ್ಲ ಅಂತಿಟ್ಕೋ, ನಿಧಾನವಾಗಿ ನಿನ್ನ ದೀಪದಲ್ಲಿರೋ ಎಣ್ಣೆ ತೀರ್‍ತಾ ಹೋಗತ್ತೆ. ಎಣ್ಣೆ ಪೂರಾ
ಖಾಲಿಯಾದ ಮೇಲೆ ಆ ದೀಪ ಮತ್ಯಾವತ್ತೂ ಬೆಳಗೋದಿಲ್ಲ, ಯಾರಿಂದಲೂ ಬೆಳಗೋಲ್ಲ.
..
...
ನಿನ್ನ ಎದೇಲಿರೋ ನಂದಾದೀಪ ಬೆಳಗುತ್ತಿದ್ದ ಹಂಗೇ ಅದನ್ನು ಆರಿಸೋಕೂ ಜನ ಕಾಯ್ತಾ ಇರ್‍ತಾರೆ.
ಅಂಥೋರಿಂದ ನಿನ್ನ ದೀಪಾನ್ನ ಜೋಪಾನವಾಗಿ ಇಟ್ಕೋಳೋದು ನಿನ್ನ ಜವಾಬ್ದಾರಿ. ಅಂಥೋರ ಉಸಿರು
ನಿನ್ನ ಜೀವನಕ್ಕೆ ತಗುಲಿದ್ರೂ ನಿನ್ನ ದೀಪ ಮಂಕಾಗಿ ಬಿಡತ್ತೆ. ಮಂಕಾಗ್ತಾ ಮಂಕಾಗ್ತಾ ಆರೇ ಹೋಗಿ ಬಿಡತ್ತೆ.
ಇಂಥೋರಿಂದ ದೂರ ಇರೋದೇ ಒಳ್ಳೇದು. ಇದು ನಿಂಗೂ ಗೊತ್ತಾಗಿರಬೇಕಲ್ಲಾ.
...
...
ದೀಪದ ಎಣ್ಣೆ ತೀರಹೋಯ್ತು, ದೀಪ ಆರಿ ಹೋಯ್ತು ಅಂತ ಯೋಚನೆ ಮಾಡಬೇಕಿಲ್ಲ. ದೀಪಾನ್ನ
ಮತ್ತೆ ಹಚ್ಚಬಹುದೂ ಅಂತ ನಿಂಗೆ ನಂಬಿಕೆ ಇರಬೇಕು. ಅಂದ್ರೆ ದೀಪ ಹಚ್ಚೋಕೆ ದಾರಿ ಸಿಗತ್ತೆ. ಕಳೆದು
ಹೋದರೆ ಮತ್ತೆ ಸಿಗಲಾರದ ವಸ್ತು ಏನಲ್ಲಾ ಅದು. ಸಿಕ್ಕೇ ಸಿಗತ್ತೆ. ದೀಪ ಹಚ್ಚೋಕೆ ಯಾರಾದ್ರೂ ಸಿಕ್ಕೇ
ಸಿಗ್ತಾರೆ ಅಂತ ನಂಬಿಕೆಯಿರಬೇಕು. ಸಿಕ್ಕೇ ಸಿಗ್ತಾರೆ...
....
ನನ್ನ ಎದೇಲೂ ಒಂದು ದೀಪ ಇದೆ. ಎಣ್ಣೆ ಇದೇ ದೀಪ ಬೆಳಗೋಕೆ ಯಾರು ಬರ್‍ತಾರೆ ಅಂತ ಕಾಯ್ತಾ
ಇದೀನಿ. ಯಾರಾದ್ರೂ ಬಂದೇ ಬರ್‍ತಾರೆ ಅನ್ನೋ ನಂಬಿಕೆ ನಂಗಿದೆ. ಏನಂತೀಯ......

Saturday, May 26, 2007

ಅಲ್ಲಿ ಎಲ್ಲರೂ ಕಲ್ಲಾಗಿದ್ದಾರೆ

ಪಲ್ಲಕ್ಕಿ ಹಿಡಿದು ನಿಂತವರು, ವಾಲಗದವರು, ಆರತಿ ತಟ್ಟೆ ಹಿಡಿದೋರು ಒಟ್ಟಿನಲ್ಲಿ ಅವತ್ತು ದಿಬ್ಬಣಕ್ಕೆ ಹೊರಟಿದ್ದ ಎಲ್ರೂವೇ ಕಲ್ಲಾಗಿದ್ದಾರೆ ಕಣ್ರೀ... ಕತೆ ಕೇಳುತ್ತಿದ್ದ ನಮ್ಮ ಮುಖಗಳನ್ನು ನೋಡಿ ಮತ್ತೆ ಮುಂದುವರೆಸಿದ... ಇಗ್ಲೂ ಆ ಗುಡ್ಡದ ಮೇಲೆ ಆವತ್ತು ಕಲ್ಲಾದವರೆಲ್ಲಾ ಹಂಗೇ ನಿಂತಿದ್ದಾರೆ.. ಬೇಕಾರೆ ನೀವು ಹೋಗಿ ನೋಡಬಹುದು ಅಂದಾಗ ನಾವು ಒಮ್ಮೆ ಗುಡ್ಡ ನೋಡಿ ಇನ್ನೊಮ್ಮೆ ಆತನ ಮುಖ ನೋಡಿದೆವು. ಗುಡ್ಡದಷ್ಟೇ ನಿರ್ಲಿಪ್ತವಾಗಿತ್ತು ಕತೆ ಹೇಳುತ್ತಿದ್ದ ಮುದುಕನ ಮುಖ.
ದಟ್ಟ ಕಾಡಿನಿಂದ ಆವೃತ್ತವಾದ ಈ ಗುಡ್ಡದಲ್ಲಿ ಅಡಗಿರುವ ಕತೆ ನಮ್ಮನ್ನು ಹೊಸ ಲೋಕಕ್ಕೆ ಕರೆದೊಯ್ಯತೊಡಗಿತು.
ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗದಲ್ಲಿ ಹಾಗೇ ಒಂದು ಸುತ್ತು ಹೊರಡುವ ಚಾಳಿ ನಮಗೆ ಅಪರೂಪದ ಅನುಭವಗಳನ್ನು ನೀಡಿದೆ. ಶಿವಮೊಗ್ಗ ದಾಟುತ್ತಿದ್ದಂತೆ ಸಿಗುವ ಹರಕೆರೆ ಈಶ್ವರ ದೇವಾಲಯ, ಹೊಸಳ್ಳಿ, ಗಾಜನೂರಿನ ಡ್ಯಾಮು, ಇನ್ನೊಂದೈದು ನಿಮಿಷ ಸಾಗಿದರೆ ಸಕ್ಕರೆಬೈಲಿನ ಆನೆಗಳ ಬಿಡಾರ, ಅಲ್ಲಿಂದ ಕೂಗಳತೆಯಲ್ಲಿರುವ ಅಶ್ವಿನಿವನ ಹೀಗೆ ಸಾಗುತ್ತಿದ್ದಂತೆ ಮಂಡಗದ್ದೆಯಲ್ಲಿ ಪಕ್ಷಿಗಳ ಕಲರವ ಕೇಳಿಕೊಂಡು ಮಡುಬು ಸೇತುವೆ ಬಳಿ ಹೊಳೆಯಲ್ಲಿ ಒಂದಷ್ಟು ಮೀದು ಹಿಂತಿರುವುಗುದು. ನಾವೇನು ಮಹಾನ್ ಈಜುಗಾರರಲ್ಲ, ಸೊಂಟಮಟ್ಟದವರೆಗಿನ ನೀರಿನಲ್ಲಿ ಒಂದು ಬಂಡೆ ಹಿಡಿದುಕೊಂಡು ಕಾಲು ಬಡಿಯುವುದು, ಅಲ್ಲೆ ಮುಳುಗೇಳುವುದೇ ನಮ್ಮ ಈಜು. ಆದರೆ, ನಮ್ಮ ಕತೆಗಳನ್ನು ಕೇಳಿದವರು ನಾವೆಲ್ಲಾ ಮಹಾನ್ ಈಜುಗಾರರು ಎಂದೇ ಭಾವಿಸಿದ್ದಾರೆ. ಅಪ್ಪಿತಪ್ಪಿ ಯಾರಾದರೂ ಹೊಳೆಪಾಲಾದಾಗ ನಮ್ಮನ್ನು ಕರೆದರೆ....... ಮುಂಚೆ ಹೋಳೆಪಾಲಾದವನೊಂದಿಗೆ ನಾನೂ ಹೊಳೆಪಾಲು ಅಷ್ಟೇ, ಅಥವಾ ನನ್ನನ್ನೂ ಏಳೆಯಲು ಇನ್ನೊಬ್ಬ ಬರಬಕೇಷ್ಟೇ.
ನಮ್ಮ ಅರ್ಧ ದಿನದ ಫೆವರೆಟ್ ಪಿಕ್‌ನಿಕ್ ಇಷ್ಟು, ಇನ್ನಷ್ಟು ಸಮಯ ಇದ್ದರೆ ಮುಡುಬ ಸೇತುವೆ ದಾಟಿ ಖಾಂಡ್ಯದ ಮೂಲಕ ಮೃಗವಧೆ ದೇವಾಲಯಕ್ಕೆ ಹೋಗಿ ಅಲ್ಲಿ ಇನ್ನೊಂದಷ್ಟು ಹೊತ್ತು ನೀರಾಟ ನಂತರ ದೇವಾಲಯದಲ್ಲಿ ಪುಷ್ಕಳ ಭೋಜನ ಮುಗಿಸಿ ಕಾಡಿನ ನಡುವೆ ಯಾವುದಾದರೊಂದು ಮರದ ಕೆಳಗೆ ಒಂದು ಗಂಟೆ ಸಂಪಾದ ನಿದ್ದೆ ಮಾಡಿ ಸಂಜೆ ವೇಳೆಗೆ ಹಿಂತಿರುಗುವ ಮೂಲಕ ದಿನ ಕಳೆಯುವುದು. ಕೆಲ ದೇವಾಲಯಗಳು ನಮಗೆ ತುಂಬಾ ಇಷ್ಟವಾಗ್ತವೆ...ಅಲ್ಲಿನ ದೇವರಿಂದ ಖಂಡಿತಾ ಅಲ್ಲ.. ಅಲ್ಲಿ ದೊರೆಯುವ ರುಚಿಯಾದ ಊಟದಿಂದ. ದೇವರ ಮೇಲೆ ಭಕ್ತಿ ಇಲ್ಲದಿದ್ದರೂ ಊಟದ ಮೇಲಿನ ಆಪಾರ ಭಯ- ಭಕ್ತಿ ಇರುವುದರಿಂದ ಇಂಥ ಜಾಗಗಳಿಗೆ ಭೇಟಿ ನೀಡುತ್ತೇವೆ.

ಮುಡುಬದ ಮಂಜಪ್ಪಗೌಡ್ರ ಮನೆ ದಾಟಿದ ಒಂದು ಏರು ಇದು ಇಳಿಜಾರು ಮುಗಿದ ನಂತರ ಸಿಗೋದು ಮಲ್ಲಂದೂರು ಎಂಬ ಪುಟ್ಟ ಗ್ರಾಮ. ರಸ್ತೆಯ ಬಲಭಾಗದಲ್ಲಿ ಒಂದಷ್ಟು ಮನೆಗಳು ಎಡ ಭಾಗದಲ್ಲಿ ದೊಡ್ಡದಾದ ದಟ್ಟ ಮರಗಿಡ ಬಳ್ಳಿಗಳಿಂದ ಕೂಡಿದ ಗುಡ್ಡ, ಸುತ್ತ ಗದ್ದೆಬೈಲು, ಒಂದಷ್ಟು ಅಡಕೆ ತೋಟಗಳ ಇತ್ಯಾದಿಗಳಿಂದ ಕೂಡಿದ ಮಲೆನಾಡಿನ ಊರು.
ಅವತ್ತು ಮೃಗವಧೆಗೆ ಹೋಗುವಾಗ ಹಿಂದಿದ್ದವರು ಬರಲಿ ಎಂದು ಮಲ್ಲಂದೂರಿನ ಒಂದು ಅಂಗಡಿ ಮುಂದೆ ಸ್ವಲ್ಪಹೊತ್ತು ನಿಂತೆವು. ಆವಾಗ್ಲೆ ಈ ಮುದುಕ ನಮ್ಮೆದುರು ಬಂದು ನಿಂತದ್ದು, ಗುಡ್ಡದ ಕತೆ ಹೇಳಿದ್ದು.
ಕತೆ ನಡೆದದ್ದು ಪಾಳೆಗಾರರು ಈ ಪ್ರದೇಶವನ್ನು ಆಳುತ್ತಿದ್ದ ಕಾಲದಲ್ಲಂತೆ.....

ಚಿತ್ರ. ಮುಡುಬಾ ಸೇತುವೆ ಬಳಿಯ ನದಿ ತುಂಗೆ...

ಬಾಕಿ ಮುಂದಿನ ಕಂತಿನಲ್ಲಿ.......


Thursday, May 24, 2007

ಎಂದೂ ಮುಳಗದ ಬೋಟು...



ನಾವೊಂದಷ್ಟು ಮಂದಿ ಬೈಕನೇರಿ ಬೆಳ್ಳಂಬೆಳಗ್ಗೆನೇ ಹೋರಟಿದ್ದು ತೀರ್ಥಹಳ್ಳಿ ರಸ್ತೆಯ ಮಾರ್ಗದಲ್ಲಿ. ಶಿವಮೊಗ್ಗದಿಂದ ಗಾಜನೂರು ಅಣೆಕಟ್ಟೆ ದಾಟುವಷ್ಟರಲ್ಲೇ ಇರುವ ಸಕ್ಕರೆಬೈಲು ಆನೆ ಬಿಡಾರ ನಮ್ಮ ಮೊದಲ ನಿಲುಗಡೆಯ ಸ್ಥಳ. ಹಿನ್ನೀರಿನಲ್ಲಿ ಬಂಡೆಗಳಂತೆ ಆನೆಗಳನ್ನು ಕೆಡವಿಕೊಂಡು ಅವುಗಳ ಮೈ ತಿಕ್ಕುವ ಮಾವುತರ ಕೆಲಸವನ್ನು ಅಚ್ಚರಿಯಿಂದ ನೋಡುತ್ತಿದ್ದಂತೆ ನಮ್ಮ ಬಳಿ ಬಂದವನು ಸಾದಿಕ್. ‘ಸಾರ್ ಬನ್ನಿ ಆ...ಲ್ಲಿ ಕಾಣ್ತಿದೆಯಲ್ಲಾ ಆ ಮರದವರೆಗೂ ಬೋಟಿನಲ್ಲಿ ಕರೆದುಕೊಂಡು ಹೋಗ್ತಿನಿ. ಒಬ್ಬರಿಗೆ ಬರೀ ಹದಿನೈದು ರುಪಾಯಿ ಅಷ್ಟೇ ಸಾರ್’ ಅಂದ. ಆತ ತೋರಿದ ಬೋಟು ನೋಡಿದರೆ ನಮಗೆ ಒಳಗೊಳಗೆ ದಿಗಿಲು. ನಮ್ಮ ಅನುಮಾನ ತುಂಬಿದ ಮುಖಗಳನ್ನು ನೋಡಿ ಅರ್ಥಮಾಡಿಕೊಂಡ ಆತ ‘ಸಾರ್ ಇದು ಕಬ್ಬಿಣದ ಬೋಟು ಸಾರ್....ಯಾವತ್ತೂ ಮುಳಗಲ್ಲ ನೋಡಿ, ಒಂದ್ಸಲ ಹತ್ತಿ ಸಾರ್ ನಿಂಗೆ ಗೋತ್ತಾಗುತ್ತೆ’ ಎಂದ. ಆತನ ಮಾತನ್ನು ನಾವೇನೂ ನಂಬಲಿಲ್ಲ. ಆದರೆ, ಹಿನ್ನಿರಿನಲ್ಲಿ ವಿಹರಿಸುವ ಆಸೆ ಹತ್ತಿಕ್ಕಿಕೊಳ್ಳಲಾಗದೆ ಆಗಿದ್ದಾಗಲಿ ಎಂದು ಆತ ತೋರಿದ ಎಂದೂ ಮುಳುಗದ ಬೋಟನ್ನೇರಿ, ಆತ ತೋರಿದಂತ ವಾಸ್ತು ಪ್ರಕಾರ ಕುಳಿತೆವು. ನೋಡಿ ಸಾರ್ ಆ ನೀರನಲ್ಲಿ ಇದ್ಯಲ್ಲಾ ಆ ಆನೆಯತ್ರ ಹೋದಾಗ ಗಲಾಟೆ ಮಾಡಬೇಡಿ... ಅದೇ ಆನೆ ಮೊನ್ನೆ ಟಾಟಾ ಸುಮೋನ ಪಲ್ಟಿ ಮಾಡಿತ್ತು ಎಂದ.. ನಾವು ಹತ್ತಿ ಕೂಂತಿದ್ದ ಎಂದೂ ಮುಳುಗದ ಬೋಟು ಆ ಆನೆಗೆ ಟಾಟಾ ಸುಮೋದಂಗೆ ಕಂಡರೇನು ಮಾಡೋದು ಅನ್ಕೊಂಡು ನಾವು ಸಮಸ್ತವನ್ನು ಮುಚ್ಚಿಕೊಂಡು ಕಣ್ಣನ್ನು ಮಾತ್ರ ಬಿಟ್ಟುಕೊಂಡು ಇರುವ ದೃಢ ನಿರ್ಧಾರ ಮಾಡಿದೆವು. ಆದರೆ, ಆತ ಮೊದಲು ಅತ್ಲಾಕಡೆ ಹೋಗಿ ಬರೋಣ ಸಾರ್.. ಎಂದು ಕರೆದೊಯ್ದ. ಸಧ್ಯ ಪಲ್ಟಿ ಮಾಡಿಸುವ ಆನೆಯಿಂದ ದೂರದಲ್ಲೇ ಹೋಗುತ್ತಿದ್ದೇವೆ ಅನ್ಕೊಂಡು ಹಿನ್ನೀರಿನಲ್ಲಿ ಎಂದೂ ಮುಳಗದ ಬೋಟನ್ನೇರಿ ಹೊರಟೆವು.

ಪ್ರಕೃತಿ ಎಂಬ ವಿಸ್ಮಯ

ಪ್ರಕೃತಿ- ಸಕ್ಕರೆಬೈಲಿನಲ್ಲಿರುವ ಪುಟಾಣಿ ಆನೆ, ನಾಲ್ಕು ವರ್ಷದ ಈ ಪೋರಿಯ ತುಂಟತನಕ್ಕೆ ಮಿತಿಯೇ ಇಲ್ಲಾರಿ... ದೊಡ್ಡ ಆನೆಗಳ ಕಾಲ ನಡುವೆ ನುಸುಳಿಕೊಂಡು ಬಳಕುತ್ತಾ ಸೊಗಸಾಗಿ ಸಾಗುತ್ತಾಳೆ. ಎದುರು ನಾಯಿಯೋ, ದನವೋ, ಎಮ್ಮೆಯೋ ಬಂದರ ಇನ್ನಷ್ಟು ನಿಧಾನ...ನಿಧಾನ... ಹತ್ತಿರ ಹೋದ ತಕ್ಷಣವೇ ಗುದ್ದುತ್ತಾಳೆ. ಈಕೆಯ ಗುದ್ದಿಗೆ ನಾಯಿಗಳಂತೂ ದಿಕ್ಕಾಪಾಲಾಗಿ ಓಡುತ್ತವೆ. ನೀರಿನಲ್ಲಿ ದೊಡ್ಡ ಆನೆಗಳು ಮಲಗಿ ವಿಶ್ರಾಂತಿ ಪಡೆಯುತ್ತಿದ್ದರೆ ಈಕೆ ಸೀದಾ ಹೋಗಿ ಅವುಗಳ ಹೊಟ್ಟೆ ಮೇಲೇರಿ ಠೀವಿಯಿಂದ ಕೂರುತ್ತಾಳೆ.. ಸಕ್ಕರೆಬೈಲಿಗೆ ಬರುವ ಪ್ರಯಾಣಿಕರ ದಂಡಿನಲ್ಲಿರುವ ಪುಟ್ಟ ಮಕ್ಕಳ ಬಳಿ ಬಂದು ತಿವಿಯುತ್ತಾಳೆ. ಮಾವುತರು ಜೋರು ಮಾಡಿದರೆ ಏನೂ ಗೊತ್ತಿಲ್ಲದ ಮಳ್ಳಿಯಂತೆ ದೊಡ್ಡ ಆನೆಗಳ ಮರೆಗೆ ಹೋಗಿ ನಿಲ್ಲುತ್ತಾಳೆ...